“ಗುಡಿಯಲ್ಲಿ ದೇವರ ಮೂರ್ತಿ ಇದ್ದರೆ ಚಂದ ಮನೆಯಲ್ಲಿ ತಂದೆ ತಾಯಿ ಇದ್ದರೆ ಚಂದ”
ಸುರಭಿ ಮಹಿಳಾ ಮಂಡಳಿ(ರಿ) ಸಂಸ್ಥೆಯು ಸರ್ಕಾರೇತರ ಸಂಸ್ಥೆಯಾಗಿದೆ ಉತ್ತಮವಾದ ಆದರ್ಶಪರವಾದ ಧೆಯೋಧ್ಯೇಶಗಳೊಂದಿಗೆ ಸೇವಾ ಮನೋಭಾವನೆ, ಸಾಮಾಜಿಕ, ಆರ್ಥಿಕ ಅವಲಂಬನೆ ಕಾರ್ಯಕ್ರಮಗಳನ್ನು ಕ್ರಿಯಾಶೀಲತೆಯಿಂದ ನಡೆಸಿಕೊಂಡು ಬಂದಿರುತ್ತವೆ. ಮನುಕುಲದ ಒಳತಿಗಾಗಿ ಸಮಾಜದ ಎಲ್ಲ ತರಹದ ಜನಾಂಗಕ್ಕಾಗಿ ತನ್ನದೇ ಆದ ಸೃಜನಾತ್ಮಕವಾದ ಕಾರ್ಯಗಳನ್ನು ಯಶಸ್ವಿಯಾಗಿ ಮಾಡುತ್ತ ಜನಮಾನಸದಲ್ಲಿ ಇರುತ್ತದೆ. ಜೀವನದ ಸಂಧ್ಯಾ ಕಾಲದಲ್ಲಿ ಒಂಟಿತನ ಆರ್ಥಿಕ ಸಂಕಷ್ಟ, ಮಾನಸಿಕ ತುಮುಲ, ಅನಾರೋಗ್ಯ, ಜೀವನ ರಕ್ಷಣೆ ಮುಂತಾದ ಸಮಸ್ಯೆಗಳಲ್ಲಿ ಸಿಲುಕಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಕಾಲ ಮರಣ ಸಂಭವಿಸದಿದ್ದರೆ, ನಾವೆಲ್ಲರೂ ವೃದ್ಧಾಪ್ಯಕ್ಕೆ ಕಾಲಿಡುತ್ತೇವೆ. “ಮುಪ್ಪು ತಪ್ಪೇ”. ಕುಟುಂಬದಲ್ಲಿ ಹಿರಿಯರು ಇರಬೇಕು, ಹಿರಿಯರು ಇದ್ದ ಮನೆ ದೇವಾಲಯವಿದ್ದಂತೆ, ಮುಪ್ಪಾದ ವಯಸ್ಸಿನಲ್ಲಿ ತಂದೆ ತಾಯಿಗಳನ್ನು ನೋಡಿಕೊಳ್ಳುವುದು ಮಕ್ಕಳಾದವರ ಕರ್ತವ್ಯ. ತಮ್ಮನ್ನು ಚಿಕ್ಕಂದಿನಿಂದ ದೊಡ್ಡವರಾಗುವವರೆಗೆ ಸಾಕಿ ಬೆಳಸಿ, ಒಂದು ಒಳ್ಳೆಯ ದಾರಿ ದೀಪವನ್ನಾಗಿ ಮಾಡಿರುತ್ತಾರೆ. ಆದರೂ ವೃದ್ಧಾಪ್ಯ ಜೀವನದ ಸಮಯದಲ್ಲಿ ಮಕ್ಕಳು ತಂದೆ ತಾಯಿಗಳನ್ನು ಸಲಹಲು ಮುಂದಾಗುವುದಿಲ್ಲ. ವೃದ್ಧಾಪ್ಯ ಜೀವನದಲ್ಲಿ ತಂದೆ – ತಾಯಿಗಳಿಗೆ ಮಕ್ಕಳಿಂದ ಸಿಗುವ ಸೌಕರ್ಯಗಳು ಸಿಗುವುದಿಲ್ಲ. ತಂದೆ-ತಾಯಿ ಬೇಸತ್ತು ತಮ್ಮ ಜೀವನದ ಗುರಿಯನ್ನೇ ಬದಲಾಯಿಸಿಕೊಳ್ಳುತ್ತಾರೆ ಇಲ್ಲವೇ ಮರಣದ ಹಾದಿಯನ್ನು ಹಿಡಿಯುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೂ ಮತ್ತು ತಮ್ಮ ಸಂಬಂಧಿಕರಿಗೂ ಬೇಡವಾದ ಹಿರಿಯರ ಬಾಳಿಗೆ ಆಶ್ರಯ ಒದಗಿಸಲು ಸಮಾಜವೇ ಹಿರಿಯ ಜೀವಗಳಿಗೆ ಹೆಗಲು ಕೊಟ್ಟು, ನಿಲ್ಲುವಂತಹ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿರುವ ಸುರಭಿ ವೃದ್ಧಾಶ್ರಮವು ವೃದ್ಧರಿಗೆ ಎಲ್ಲ ವ್ಯವಸ್ಥೆಯನ್ನು ಕಲ್ಪಿಸುವುದರೊಂದಿಗೆ ವೃದ್ಧರ ಬಾಳಿನ ಆಶಾದೀಪವಾಗಿದೆ. ಈ ಸುರಭಿ ವೃದ್ಧಾಶ್ರಮವನ್ನು 2018 ರಲ್ಲಿ ಸುರಭಿ ಮಹಿಳಾ ಮಂಡಳಿ ಸಂಸ್ಥೆಯು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅನುದಾನದಡಿಯಲ್ಲಿ ಆರಂಭಿಸಿತು.
ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವುದರಿಂದ ಹಿರಿಯರು ವೃದ್ಧಾಶ್ರಮ ಸೇರಿಕೊಳ್ಳುವ ಪರಿಸ್ಥಿತಿ ಒದಗಿ ಬಂದಿದೆ. ಆರ್ಥಿಕ ಅಭದ್ರತೆ ಗಗನಕ್ಕೇರುವ ನಿತ್ಯ ವಸ್ತುಗಳ ಬೆಲೆಗಳು ಹಾಗೂ ಆರೋಗ್ಯ ವೆಚ್ಚ ಇವೆಲ್ಲವುಗಳು ಹಿರಿಯರನ್ನು ಕಾಡುತ್ತಿರುವ ನಿತ್ಯ ಸಮಸ್ಯೆಗಳು. ಯಾವುದೇ ಸಂದರ್ಭ ಇದ್ದರೂ ಕುಟುಂಬಗಳು ಹಿರಿಯರನ್ನು ಕಡ್ಡಾಯವಾಗಿ ಪೋಷಿಸಲೇಬೇಕೆಂದು ಘನ ಉದ್ದೇಶದಿಂದ ಪಾಲಕರ ಪೋಷಣೆ ಮಾಡುವ ಮೂಲಕ ಕೊಪ್ಪಳ ಜಿಲ್ಲೆಯಲ್ಲಿರುವ ಸುರಭಿ ವೃದ್ಧಾಶ್ರಮವು ಜನಮಾನಸದಲ್ಲಿ ಯಶಸ್ವಿಯಾಗಿದೆ. ಇಂದಿನ ಯಾಂತ್ರಿಕತೆಯ ಆಧುನಿಕ ವಿಭಕ್ತ ಕುಟುಂಬಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅವಿಭಕ್ತ ಕುಟುಂಬಗಳಲ್ಲಿದ್ದ ಸಾಮರಸ್ಯ ಹೊಂದಾಣಿಕೆ ಹಾಗೂ ಹಿರಿಯರಿಗೆ ತೋರುತ್ತಿದ್ದ ಗೌರವ ದೂರವಾಗಿ ವೃದ್ಧರ ಜೀವನ ನೀರಸವಾಗಿದೆ. ರೆಕ್ಕೆ ಬಂದ ಹಕ್ಕಿ ತನ್ನ ಗೂಡನ್ನು ತೊರೆಯುವಂತೆ, ಇಂದಿನ ಯುವ ಜನಾಂಗ ಆರ್ಥಿಕ ಸ್ವಾವಲಂಬನೆಯ ನೆಪದಲ್ಲಿ ಉದ್ಯೋಗವನ್ನರಸಿ ಸಾಕಿ ಬೆಳಸಿದ ಹಿರಿಯರನ್ನು ಕಡೆಗಣಿಸಿ ತಮ್ಮ ಜೀವನ ರೂಪಿಸಿಕೊಳ್ಳಲು ಮುಂದಾಗಿರುವುದು ಬೇಸರದ ಸಂಗತಿ. ತಮ್ಮ ಕಿರಿಯರ ಏಳಿಗೆಗಾಗಿ ಮಕ್ಕಳ ಪಾಲನೆಗಾಗಿ ಹಿರಿಯರು ತಮ್ಮ ಜೀವನವನ್ನು ಮುಡಿಪಾಗಿಸಿದ್ದರು. ಈಗಿನ ಕುಟುಂಬಗಳು ಚಿಕ್ಕದಾಗಿ ಹಿರಿಯರನ್ನು ಸಂಪೂರ್ಣವಾಗಿ ನೋಡಿಕೊಳ್ಳುವವರು ಸಿಗುತ್ತಿಲ್ಲ. ವೃದ್ಧರ ಮೇಲಿನ ಅಪರಾಧ ಮತ್ತು ಮಾನಸಿಕ ನಿಂದನೆ, ಹಲ್ಲೆ ದಿನವು ದಿನಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಓದುತ್ತಿರುವ ಸುದ್ದಿಯಾಗುತ್ತಿದೆ. ಯಾವುದೇ ಸಂದರ್ಭ ಇದ್ದರೂ ಕುಟುಂಬಗಳು ಹಿರಿಯರನ್ನು ಕಡ್ಡಾಯವಾಗಿ ಪೋಷಿಸಲೇಬೇಕೆಂದು ಘನ ಉದ್ದೇಶದಿಂದ ಪಾಲಕರ ಪೋಷಣೆ ಮಾಡುವ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ ಸುರಭಿ ವೃದ್ಧಾಶ್ರಮವು ಜನಮಾನಸದಲ್ಲಿ ಯಶಸ್ವಿಯಾಗಿದೆ.
ಇದೋಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು 3 ವರ್ಷಗಳಿಂದಲೂ ಹಿರಿಯನಾಗರಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಹಿರಿಯ ನಾಗರಿಕರ ಹಾಗೂ ಅವರ ಸೇವೆಯ ಜೊತೆಗೆ ಸಂತೋಷ ಮತ್ತು ನೆಮ್ಮದಿಯ ಜೀವನವನ್ನು ದೊರಕಿಸಿ ಕೊಡುವ ಕಾರ್ಯ ಮಾಡುತ್ತಾ ಬಂದಿರುತ್ತದೆ. ವಯೋವೃದ್ಧರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರ ಮೂಲಕ ಅವರ ಜೀವನ ಗುಣಮಟ್ಟವನ್ನು ಅಭಿವೃದ್ಧಿಪಡಿಸಿ ಆ ಮೂಲಕ ಅವರಲ್ಲಿ ಜೀವನೋತ್ಸಾಹವನ್ನು ತುಂಬುವುದು, ಹಿರಿಯ ನಾಗರಿಕರಿಗೆ ಸರ್ಕಾರಿ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಂದ ಸಿಗುವಂತಹ ಎಲ್ಲ ರೀತಿಯ ಸೇವೆಗಳನ್ನು ದೊರಕಿಸಿಕೊಡುವುದು ಈಗಿನ ದಿನಮಾನಗಳಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ತಮ್ಮ ಕುಟುಂಬವಾಯಿತು ಎಂಬ ಇಂದಿನ ಪೀಳಿಗೆಯ ಯುವ ಸಮೂಹ ಸ್ವಾರ್ಥಪರ ಜೀವನ ನಡೆಸುವ ಮೂಲಕ ತಮ್ಮ ಮಕ್ಕಳಿಂದ ನಿರ್ಲಕ್ಷಿತ ವೃದ್ಧಾಪ್ಯ ಅಂಚಿನಲ್ಲಿರುವ ತಂದೆ ತಾಯಿಯಂದಿರು ಇತ್ತ ಬದುಕಲೂ ಆಗದೆ ಬದುಕುತ್ತಿರುವ ಹಿರಿಯ ಜೀವಿಗಳ ಸಂಖ್ಯೆ ಜಾಸ್ತಿ ಆಗುತ್ತಿದೆ. ಜನ್ಮ ನೀಡಿದ ಮಕ್ಕಳು, ಮೊಮ್ಮಕ್ಕಳು ,ಸಂಬಂಧಿಕರು ಪ್ರೀತಿ, ವಾತ್ಸಲ್ಯ, ಮಮತೆ ಹಾಗೂ ಕರುಣೆಯಿಂದ ವಂಚಿತರಾದ ವೃದ್ಧರು ಮನೆ ಬಿಟ್ಟು ಬಂದ ಪ್ರೀತಿಯಿಂದ ನೋಡಿಕೊಳ್ಳುವ ಮತ್ತು ಅರೈಕೆ ಮಾಡುವ ಮನಸ್ಥಿತಿ ಬೇಕಾಗಿರುತ್ತದೆ.
ವೃದ್ಧಾಶ್ರಮಗಳು ಹಿರಿಯನಾಗರಿಕರಿಗೆ ತಮ್ಮ ಕುಟುಂಬಗಳೊಂದಿಗೆ ಇರಲು ಸಾಧ್ಯವಾಗದ ಹಾಗೂ ನಿರ್ಗತಿಕರಾಗಿರುವ ಆಶ್ರಯ ನೀಡುತ್ತಾ ಇರುತ್ತವೆ. ಎಲ್ಲಿಯೂ ಹೋಗಲು ಸಾಧ್ಯವಾಗದ ಮತ್ತು ಅವರನ್ನು ಬೆಂಬಲಿಸಲು ಯಾರೂ ಇಲ್ಲದ ವೃದ್ಧರಿಗೆ ವೃದ್ಧಾಶ್ರಮಗಳು ಸುರಕ್ಷಿತ ತಾಣವನ್ನು ಒದಗಿಸುತ್ತವೆ. ಅವರಿಗೆ ಮನೆಯ ವಾತಾವರಣದಂತಹ ಕುಟುಂಬವನ್ನು ಸೃಷ್ಟಿಸುತ್ತವೆ, ಹಿರಿಯ ನಾಗರಿಕರು ತಮ್ಮ ಸಂತೋಷ ಮತ್ತು ದುಃಖಗಳನ್ನು ಪರಸ್ಪರ ಹಂಚಿಕೊಂಡಾಗ ಭದ್ರತೆ ಮತ್ತು ಸ್ನೇಹಪರತೆಯನ್ನು ಅನುಭವಿಸುತ್ತಾರೆ. ಹಿರಿಯರನ್ನು ಗೌರವದಿಂದ ಕಾಣುವ ಪರಂಪರೆಯೊಂದು ಈ ದೇಶಕ್ಕಿದೆ, “ ಮಾತೃ ದೇವೋ ಭವ, ಪಿತೃ ದೇವೋಭವ” ಎಂಬ ಈ ಪದಗುಚ್ಚ ಈ ದೇಶದಲ್ಲಿ ಪ್ರಚಲಿತದಲ್ಲಿದೆ. ತಂದೆ ಮತ್ತು ತಾಯಿಯು ದೇವರಿಗೆ ಸಮಾನವೆಂಬಷ್ಟು ಗೌರವಾರ್ಹ ಭಾವನೆಯು ನಮ್ಮ ಸಂಸ್ಕೃತಿಯ ಭಾಗವಾಗಿ ಬಿಟ್ಟಿದೆ.
ಮುಂದುವರಿದ ಜನಸಂಖ್ಯೆಯಲ್ಲಿ ಕಡಿಮೆ ಇರುವ ರಾಷ್ಟ್ರಗಳಿಗೆ ಹೋಲಿಸಿದರೆ, ಜನಸಂಖ್ಯೆಯಲ್ಲಿ ಎಷ್ಟೋಪಾಲು ಅಧಿಕವಿರುವ ಭಾರತದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆ.ಎಲ್ಲ ರಾಜ್ಯಗಳಲ್ಲಿರುವ ವೃದ್ಧಾಶ್ರಮಗಳ ಸಂಖ್ಯೆ 500 ನ್ನು ಮೀರುವುದಿಲ್ಲ 10 ಕೋಟಿಗಿಂತಲು ಅಧಿಕ ವೃದ್ಧರಿರುವ ದೇಶವೊಂದಕ್ಕೆ 500 ರಷ್ಟು ವೃದ್ಧಾಶ್ರಮಗಳು ಸಾಲಬಹುದೇ ಎಂಬುವುದು ಒಂದು ಪ್ರಶ್ನೆಯಾದರೆ ವೃದ್ಧರಿಗೆ ವೃದ್ಧಾಶ್ರಮಗಳ ಅಗತ್ಯವಿದೆಯೇ ಎಂಬ ಪ್ರಶ್ನೆಯು ಇದರ ಜೊತೆ-ಜೊತೆಗೂ ಹುಟ್ಟಿಕೊಳ್ಳುತ್ತದೆ.
ಹುಟ್ಟುವಾಗ ಯಾರೂ ವೃದ್ಧರಾಗಿ ಹುಟ್ಟುವುದಿಲ್ಲ. ಮಗುತನ, ಹದಿಹರೆಯ ಯೌವ್ವನ, ನಡುವಯಸ್ಸನ್ನು ದಾಟಿಯೇ ಪ್ರತಿಯೊಬ್ಬರು ವೃದ್ಧಸ್ಥಿತಿಗೆ ತಲುಪುತ್ತಾರೆ. ಇದೊಂದು ಪ್ರಕ್ರಿಯೆ ಮಗುವಾಗಿದ್ದವರು ವಿವಿಧ ಹಂತಗಳನ್ನು ದಾಟಿ ವೃದ್ಧಾವಸ್ಥೆಗೆ ತಲುಪುವಾಗ ಅವರ ಮಕ್ಕಳು ಅವರನ್ನು ಹಿಂಬಾಲಿಸುತ್ತಾ ಇರುತ್ತಾರೆ. ಹೆತ್ತವರು ದುಡಿಯುವುದು ತಮ್ಮ ಇಷ್ಟಗಳನ್ನು ಪೂರೈಸುವುದು ಶಾಲಾ ಖರ್ಚು-ವೆಚ್ಚಗಳನ್ನು ನೋಡಿಕೊಳ್ಳುವುದು, ಸುತ್ತಾಡಿಸುವುದು ಪ್ರತಿದಿನ ಈ ಮಕ್ಕಳ ಮುಂದೆಯೇ ನಡೆಯುತ್ತಿರುತ್ತವೆ. ಪವಿತ್ರ ಕುರಾನ್ ವೃದ್ಧ ಹೆತ್ತವರ ಆರೈಕೆಯ ಸಂಪೂರ್ಣ 98 ಹೊಣೆಯನ್ನು ಅವರ ಮಕ್ಕಳ ಮೇಲೇಯೇ ಹೇರಿದೆ. ದೇಶ್ಯಾದ್ಯಂತ ವರದಿ ಮತ್ತು ಮಾಧ್ಯಮಗಳಲ್ಲಿ ನಾವು ಆಗಾಗ ಓದುತ್ತಿರುವ ಸುದ್ದಿಗಳನ್ನು ಪರಿಗಣಿಸಿದರೆ ಹಿರಿಯ ನಾಗರಿಕರ ಪಾಲನೆ ಪೋಷಣೆಯಲ್ಲಿ ಬಿರುಕು ಮೂಡಿರುವುದು ಅಪಾಯಕಾರಿ ಹಂತಕ್ಕೆ ತಲುಪುತ್ತಿರುವುದು ಸ್ಪಷ್ಟವಾಗುತ್ತಿದೆ. ಪ್ರತಿ ಮೂವರಲ್ಲಿ ಓರ್ವ ವೃದ್ಧರು ದೈಹಿಕವಾಗಿ ಹಿಂಸೆಗೆ ಒಳಗಾಗುತ್ತಾರೆ ಮತ್ತು ನಿಂದನೆಯ ಮಾತುಗಳನ್ನು ಆಲಿಸುತ್ತಾರೆ ಎಂದು ತಿಳಿದು ಬಂದಿದೆ. ವೃದ್ಧರು ತಮ್ಮ ವಯಸ್ಸನ್ನು ಭಾರವಾಗಿ ನೋಡದಂತಹ ನೆಮ್ಮದಿ ವಾತಾವರಣವನ್ನು ನಿರ್ಮಿಸುವುದು ಹೇಗೆ? ಪ್ರತಿಭಟನೆ ಮಾಡುವಂತ ವಯಸ್ಸು ಅವರದಲ್ಲ. ಪರಸ್ಪರ ನೋವು-ನಲಿವು ಹೇಳಿಕೊಳ್ಳುವುದು ಅಪಾಯಕಾರಿಯಾಗಿದೆ. ಇಂತಹ ಸ್ಥಿತಿಯಲ್ಲಿ ಹಿರಿಯ ಜೀವಿಗಳಿಗೆ ಸೌಖ್ಯ ಭಾವ ಒದಗಿಸಿ ಕೊಡುವುದು ವೃದ್ಧಾಶ್ರಮಗಳಲ್ಲಿ ಸಾಧ್ಯವಾಗುತ್ತದೆ.
ಮುಖ್ಯವಾಗಿ, ವೃದ್ಧ ಹೆತ್ತವರನ್ನು ಗೌರವದಿಂದ ಕಾಣುವಂತ ಶುದ್ಧ ಮನಸ್ಸನ್ನು ಮಕ್ಕಳು ಸಂಬಂಧಿಕರು ಬೆಳೆಸಿಕೊಳ್ಳಬೇಕು. ಚಿಕ್ಕಂದಿನಲ್ಲೇ ಆಯಾ ಹೆತ್ತವರು ತಮ್ಮ ಮಕ್ಕಳಲ್ಲಿ ತಂದೆ-ತಾಯಿ ಬಗ್ಗೆ ಉತ್ತಮ ಮನೋಭಾವನೆ, ಸಂಸ್ಕಾರ ಸಂದರ್ಭ ಸನ್ನಿವೇಶ ಅನುಸಾರವಾಗಿ ಬಿತ್ತಬೇಕು. ಮುಂದಿನ ತಲೆಮಾರು ಹೆತ್ತ ತಂದೆ-ತಾಯಿಯರಿಗೆ ವೃದ್ಧಾಶ್ರಮಗಳನ್ನು ಪರ್ಯಾಯ ಮನೆಯಾಗಿ ಕಂಡುಕೊಳ್ಳದಂತೆ ಪ್ರೇರೇಪಣೆ ನೀಡಬೇಕು. ಹಿರಿಯ ಜೀವಿಗಳಿಗೆ ವೃದ್ಧಾಶ್ರಮಗಳು ಅನಿವಾರ್ಯ ಕಾರಣಗಳ ಹೊರತು ಪರಿಹಾರ ಆಗಬಾರದು. ಆಧುನಿಕ ಪರಿಹಾರ ಕ್ರಮವಾಗಿ ವೃದ್ಧಾಶ್ರಮಗಳನ್ನು ನೆಚ್ಚಿಕೊಳ್ಳಬಹುದು. ವೃದ್ಧಾಪ್ಯ ಎನ್ನುವುದು ಸಹಜ ಸ್ಥಿತಿ ಮನಸ್ಸಿನಲ್ಲಿ ಸದುದ್ದೇಶವಿದ್ದು ಸನ್ಮಾರ್ಗದಲ್ಲಿ ಪ್ರಯತ್ನಶೀಲರಾದರೆ ಮುಪ್ಪು ಮುಂದೂಡಬಹುದು. ವೃದ್ಧರ ಹೊಣೆ ಹೊರುವುದು ಮಾನವೀಯ ಗುಣವೇ. ಹಣ್ಣೆಲೆಗೂ ಅದರದೇ ಸ್ಥಾನ-ಮಾನ ಇರುವುದು. ಮನೆಯ ಮಂದಿ ಎಲ್ಲರೂ ಕಿರಿಯರಿಗೆ ತಂದೆ-ತಾಯಿಯ ಕುರಿತು ಪೂಜ್ಯ ಭಾವನೆ ಬೆಳೆಸಿ ಎಳೆಯರಿಗೆ ಮಾದರಿಯಾಗಬೇಕು.
ನಮ್ಮದು ಅಭಿವೃದ್ಧಿ ಹೊಂದುತ್ತಿರುವ ದೇಶ. ಇಂದು ಯುವ ಪೀಳಿಗೆಯು ಸಾಮಾಜಿಕ ಸಂಬಂಧಗಳು ಸಮಸ್ಯೆಗಳನ್ನು ನಿಭಾಯಿಸುವಲ್ಲಿ ತಂತ್ರಜ್ಞಾನ ಹಣದ ವ್ಯಾಮೋಹ ನಾನು,ನನ್ನದು,ನನ್ನ ಕುಟುಂಬ ಎಂಬ ಸ್ವಾರ್ಥಪರ ಜೀವನದಿಂದ ಹಿರಿಯ ಜೀವಿಗಳಿಗೆ ಪಾಲನೆ ಪೋಷಣೆ ಮಾಡದೆ ಅವರ ಬಗ್ಗೆ ಅನುಕಂಪ ಪ್ರೀತಿ ಅವರ ಆಸೆ ಆಕಾಂಕ್ಷೆ ಮೂಲಭೂತ ಅಗತ್ಯತೆಗಳನ್ನು ಹಾಗೂ ಅವರ ಭಾವನೆಗಳಿಗೆ ಬೆಲೆ ಕೊಡದೆ ವೃದ್ಧಾಶ್ರಮಕ್ಕೆ ದಾಖಲು ಮಾಡುವ ಮನಸ್ಥಿತಿ ಎದುರಾಗಿದೆ. ಹಿರಿಯರು ಕುಟುಂಬದ ಆಧಾರ ಸ್ಥಂಬ ಅವರ ಜೀವಕ್ಕೆ ವರ್ಷಗಳು ತುಂಬಿವೆ. ಹಿರಿಯರ ಜೀವ ತುಂಬವ ಕೆಲಸವನ್ನು ಪುಣ್ಯದ ಮಾನವೀಯ ಗುಣವೆಂದು ಭಾವಿಸಿ ಮಾನವೀಯತೆ ಹಣತೆಯಂತೆ ಕಾರ್ಯನಿರ್ವಹಿಸುವ ಸಂಜೀವಿನಿಯೇ “ ವೃದ್ಧಾಶ್ರಮ”.